ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಸಿದ್ದರಾಮಯ್ಯನವರು ಈ ದೇಶದ ಕ್ಷಮೆ ಕೇಳಬೇಕು'-ನಾರಾಯಣಸ್ವಾಮಿ ಒತ್ತಾಯ

03:46 PM Jan 29, 2024 IST | Bcsuddi
Advertisement

ಬೆಂಗಳೂರು: ರಾಷ್ಟ್ರಪತಿಯವರನ್ನು ಅವಮಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ದೇಶದ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.

Advertisement

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ನಿನ್ನೆ ಅಹಿಂದ ಹೆಸರಿನಲ್ಲಿ ಕರೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಷ್ಟ್ರಪತಿಗಳಾದ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದು ಖಂಡನೀಯ ಎಂದು ಹೇಳಿದರು.

ಒಬ್ಬ ದಲಿತ ಮಹಿಳೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಇಷ್ಟೊಂದು ಕೀಳಾಗಿ ಅವರನ್ನು ಸಂಬೋಧಿಸಿದ್ದು, ಇದು ಅವರ ವ್ಯಕ್ತಿತ್ವಕ್ಕೆ ಸರಿಯಾದ ಪದಗಳಲ್ಲ. ಅದಾದ ಬಳಿಕವೂ ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಹಿರಿಯರನ್ನು ಹಳ್ಳಿ ಭಾಷೆಯಲ್ಲಿ ಹಾಗೇ ಕರೆಯುವುದಾಗಿ ಹೇಳಿದ್ದಾರೆ. ಈ ರೀತಿ ಹೇಳುವ ಮೂಲಕ ಹಳ್ಳಿಯ ಜನರನ್ನೂ ಅವರು ಅಪಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಯಾವ ಹಳ್ಳಿ ಜನರು, ಬಡವರು ಯಾರೇ ಇದ್ದರೂ ಕೂಡ ಯಾವತ್ತೂ ಯಾರನ್ನು ಕೂಡ ಕೇವಲವಾಗಿ ಅಥವಾ ಏಕವಚನದಲ್ಲಿ ಸಂಬೋಧಿಸುವುದಿಲ್ಲ ಎಂದು ವಿಶ್ಲೇಷಿಸಿದರು.

ಹಳ್ಳಿ ಜನರು ಹಿರಿಯರನ್ನು ಗೌರವದಿಂದಲೇ ಮಾತನಾಡುತ್ತಾರೆ ಎಂದು ನುಡಿದರು.ಮುಖ್ಯಮಂತ್ರಿಗಳು ಯಾಕೆ ಇಷ್ಟು ಸುಳ್ಳುಗಳನ್ನು ಹೇಳುತ್ತಾರೆ? ಎಂದು ಪ್ರಶ್ನಿಸಿದ ಅವರು, ಒಂದು ವೇಳೆ ನೀವು ಹಿರಿಯರನ್ನು ಹೋಗೋ ಬಾರೋ ಅನ್ನುವುದಾದರೆ, ಅವಳು ಇವಳು ಎಂಬ ಭಾಷೆ ಪ್ರಯೋಗ ಮಾಡುವುದೇ ಆದರೆ, ಸೋನಿಯಾ ಗಾಂಧಿಯವರು ಹಿರಿಯರಲ್ಲವೇ? ಎಷ್ಟು ಸಾರಿ ನೀವು ಸೋನಿಯಾ ಗಾಂಧಿಯವರನ್ನು ಅವಳು, ಇವಳು ಎಂದು ಮಾತನಾಡಿದ್ದೀರಿ ಎಂದು ಕೇಳಿದರು.

ಸಿದ್ದರಾಮಯ್ಯನವರು ತಮ್ಮ ಕೆಟ್ಟ ಭಾಷೆಯನ್ನು ಬದಲಿಸಲು ಟೀಚರ್ ಇಟ್ಟುಕೊಳ್ಳಲಿ. ‘ನೋಡಿ ಬೇಕಾದರೆ ನಾನೇ ಬರುವೆ’ ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು. ಯಾರ್ಯಾರನ್ನು ಯಾವ್ಯಾವ ರೀತಿ ಸಂಬೋಧಿಸಬೇಕೆಂದು ಹೇಳಿ ಕೊಡುವೆ ಎಂದು ಹೇಳಿದರು.

Advertisement
Next Article