For the best experience, open
https://m.bcsuddi.com
on your mobile browser.
Advertisement

'ಸರಕಾರಕ್ಕೆ ಸಂವಿಧಾನದ ಬಗ್ಗೆ ಗೌರವ ಇದೆಯೇ'?-ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಶ್ನೆ

01:18 PM Jan 30, 2024 IST | Bcsuddi
 ಸರಕಾರಕ್ಕೆ ಸಂವಿಧಾನದ ಬಗ್ಗೆ ಗೌರವ ಇದೆಯೇ   ಡಾ ಸಿ ಎನ್ ಅಶ್ವತ್ಥನಾರಾಯಣ ಪ್ರಶ್ನೆ
Advertisement

ಬೆಂಗಳೂರು:ಸಂವಿಧಾನ ಜಾಗೃತಿ ಸಪ್ತಾಹ ಮಾಡುತ್ತಾರೆ. ಈ ಸರಕಾರದವರು ಸಂವಿಧಾನ ಗೌರವಿಸುತ್ತಾರಾ? ಇವರಿಗೇ ಮೊದಲು ಜಾಗೃತಿ ಮೂಡಿಸಬೇಕಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇವರಿಗೆ ಸಂವಿಧಾನ ಕುರಿತ ಪರಿಜ್ಞಾನ ಇಲ್ಲ. ಇವರು ಜನರ ಭಾವನೆ ಅರ್ಥ ಮಾಡಿಕೊಂಡಿಲ್ಲ. ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.

ಕೆರೆಗೋಡಿನಲ್ಲಿ ಕಾನೂನು ಪ್ರಕಾರ ಅನುಮತಿ ಪಡೆದೇ ಧ್ವಜ ಹಾರಿಸಿದ್ದಾರೆ. ಕಾನೂನು ಪ್ರಕಾರ ತಪ್ಪಾಗಿದ್ದರೆ ನೋಟಿಸ್ ಕೊಡಬೇಕಿತ್ತು ತಾನೇ ಎಂದು ಕೇಳಿದರು. ಈಗಲಾದರೂ ಸರಕಾರ ಗ್ರಾಮಸ್ಥರ ಭಾವನೆಗೆ ಗೌರವ ಕೊಡುವ ಕೆಲಸ ಮಾಡಲಿ ಎಂದು ಒತ್ತಾಯವನ್ನು ಮುಂದಿಟ್ಟರು.

Advertisement

ಏಕಾಏಕಿ ಮುಂಜಾನೆ ಹೋಗಿ ಭಗವಾಧ್ವಜ ಇಳಿಸಿದ್ದು ಸರಿಯೇ? ನಿಯಮ ಮೀರಿ ರಾಷ್ಟ್ರಧ್ವಜ ಹಾರಿಸಿದ್ದು ಸರಿಯೇ ಎಂದೂ ಅವರು ಪ್ರಶ್ನಿಸಿದರು. ಸ್ಥಳೀಯರು ಕೆರೆಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನೂ ಯಾಕೆ ಎಫ್‍ಐಆರ್ ಮಾಡಿಲ್ಲ ಎಂದು ಕೇಳಿದರು.ರಾಷ್ಟ್ರಧ್ವಜವನ್ನು ಪೂರ್ತಿ ಏರಿಸಿಲ್ಲ. ಇದೇನು ಸರಕಾರವೇ? ಯಾವ ರೀತಿ ನಡವಳಿಕೆ ಇದು ಎಂದು ಕೇಳಿದರು.

ಬಿಜೆಪಿ- ಜೆಡಿಎಸ್ ನಡುವೆ ವೈಮನಸ್ಸು ಏನಿಲ್ಲ. ಮತ್ತೊಮ್ಮೆ ಮೋದಿ, ಮತ್ತೊಮ್ಮೆ ಬಿಜೆಪಿ ಎಂಬುದೇ ನಮ್ಮಲ್ಲರ ಗುರಿ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಮಾಜಿ ಪ್ರಧಾನಿ ದೇವೇಗೌಡರು ಕೂಡ ಅಭಿಮಾನದಿಂದ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಲಿ ಎನ್ನುತ್ತಿದ್ದಾರೆ ಎಂದು ವಿವರಿಸಿದರು.

ಇದೊಂದು ತುಘಲಕ್ ಸರಕಾರ. ಕಾನೂನನ್ನು ಇವರು ಗೌರವಿಸುವುದಿಲ್ಲ ಎಂದು ಟೀಕಿಸಿದರು.ಅದು ಗ್ರಾಮಸ್ಥರೇ ಹಣ ಸೇರಿಸಿ ನಿಲ್ಲಿಸಿದ ಧ್ವಜಸ್ತಂಭ. ಪಂಚಾಯತ್ ಕೂಡ ರಾಷ್ಟ್ರಧ್ವಜ, ನಾಡಧ್ವಜ, ಭಗವಾಧ್ವಜ ಹಾರಿಸಲು ಅನುಮತಿ ಕೊಟ್ಟಿದೆ ಎಂದು ಗಮನ ಸೆಳೆದರು.

Author Image

Advertisement