For the best experience, open
https://m.bcsuddi.com
on your mobile browser.
Advertisement

ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಮಹತ್ವದ ನಿರ್ಣಯ.! ಯಾವ ಕಾಲುವೆಗೆ ಎಷ್ಟು ಟಿಎಂಸಿ.?

08:06 AM Jan 20, 2024 IST | Bcsuddi
ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಮಹತ್ವದ ನಿರ್ಣಯ   ಯಾವ ಕಾಲುವೆಗೆ ಎಷ್ಟು ಟಿಎಂಸಿ
Advertisement

ಹೊಸಪೇಟೆ : ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆಗಿರುವ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ತುಂಗಭದ್ರಾ ಯೋಜನೆಯ 120ನೇ ತುರ್ತು ನೀರಾವರಿ ಸಲಹಾ ಸಮಿತಿ ಸಭೆಯು ಜನವರಿ 19ರಂದು ನಡೆಯಿತು.

ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣ ಕೊಠಡಿ ಸಂಖ್ಯೆ 334ರಲ್ಲಿ ನಡೆದ ಸಭೆಯಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜಡ್.ಜಮೀರ್ ಅಹಮದ್ ಖಾನ್ ಸೇರಿದಂತೆ ಇನ್ನೀತರ ಸಚಿವರು, ಸಂಸದರು, ಶಾಸಕರು ಹಾಗೂ ನೀರಾವರಿ ಸಲಹಾ ಸಮಿತಿ ಸದಸ್ಯರು, ನೀರಾವರಿ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಮತ್ತು ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದು ವಿಸ್ತೃತ ಚರ್ಚೆಯ ಬಳಿಕ ನೀರು ಒದಗಿಸುವ ಕಾಲಾವಧಿಯ ನಿರ್ಣಯ ಕೈಗೊಳ್ಳಲಾಯಿತು.

Advertisement

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ: ಕುಡಿಯುವ ನೀರಿಗೆ ಕಾಯ್ದಿರಿಸಲಾದ 0.500 ಟಿಎಂಸಿ ಪೈಕಿ 0.300 ನೀರನ್ನು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜನವರಿ 22ರಿಂದ ಏಪ್ರೀಲ್ 30ರವರೆಗೆ 60 ಕ್ಯೂಸೆಕ್ ಆನ್/ಆಫ್‌ನಂತೆ (ಕುಡಿಯುವ ನೀರು ಒಳಗೊಂಡು) ಉಳಿದಂತೆ ರಾಯಚೂರು ಜಿಲ್ಲೆಗೆ ಹಂಚಿಕೆಯಾದ 1.200 ಟಿಎಂಸಿ ನೀರನ್ನು ಫೆಬ್ರವರಿ 15 ರಿಂದ ಫೆಬ್ರುವರಿ 20ರವರೆಗೆ 0.600 ಟಿಎಂಸಿ ಮತ್ತು ಏಪ್ರೀಲ್ 10ರಿಂದ ಏಪ್ರೀಲ್ 20ರವರೆಗೆ 700 ಕ್ಯುಸೆಕ್‌ನಂತೆ 0.600 ಟಿಎಂಸಿ ನೀರನ್ನು ಕುಡಿಯುವ ಸಲುವಾಗಿ ಹರಿಸಬಹುದಾಗಿದೆ ಎಂದು ನಿರ್ಣಯಿಸಲಾಯಿತು.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ: ಜನವರಿ 21ರಿಂದ ಜನವರಿ 31ರವರೆಗೆ 100 ಕ್ಯೂಸೆಕ್‌ನಂತೆ ಮತ್ತು ಫೆಬ್ರುವರಿ-2024 ಮತ್ತು ಮಾರ್ಚ್-2024 ತಿಂಗಳಲ್ಲಿ 10 ದಿನಗಳಿಗೊಮ್ಮೆ 100 ಕ್ಯುಸೆಕ್‌ನಂತೆ ಕುಡಿಯುವ ನೀರಿನ ಸಲುವಾಗಿ ಬಳ್ಳಾರಿ ನಗರ ಹಾಗೂ ಜಿಲ್ಲೆಯ ಇತರೆ ಕುಡಿಯುವ ನೀರಿನ ಯೋಜನೆಗೆ ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಲು ನೀರು ಹರಿಸುವುದು ಎಂದು ನಿರ್ಣಯಿಸಲಾಯಿತು.

ರಾಯ ಬಸವಣ್ಣ ಕಾಲುವೆ: ವಿಜಯನಗರ ಜಿಲ್ಲೆಗೆ ಹಂಚಿಕೆಯಾದ 0.500 ಟಿಎಂಸಿ ನೀರಿನಲ್ಲಿ ಜನವರಿ 21ರಿಂದ ಮೇ.30ರವರೆಗೆ 100 ಕ್ಯುಸೆಕ್‌ನಂತೆ ಆನ್ ಆಫ್‌ನಂತೆ ಕುಡಿಯುವ ನೀರು ಹರಿಸಬಹುದಾಗಿದೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು ಸೇರಿದಂತೆ ಇನ್ನೀತರರು ಇದ್ದರು.

(ಸಾಂದರ್ಭಿಕ ಚಿತ್ರ)

Tags :
Author Image

Advertisement