'ರೈತರನ್ನು ಅವಮಾನಿಸುವ ಸಚಿವರನ್ನು ಸಂಪುಟದಿಂದ ವಜಾ ಮಾಡಿ' - ವಿಜಯೇಂದ್ರ ಆಗ್ರಹ
ಬೆಂಗಳೂರು: ರಾಜ್ಯ ಸರಕಾರದ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ರೈತರನ್ನು ಅವಮಾನಿಸುತ್ತದ್ದಾರೆ. ಅಂಥ ಸಚಿವರಿಗೆ ಮುಖ್ಯಮಂತ್ರಿಗಳು ಬುದ್ಧಿವಾದ ಹೇಳಲಿ. ತಿದ್ದಿಕೊಳ್ಳದ ಸಚಿವರ ರಾಜೀನಾಮೆ ಪಡೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರ ಕುರಿತು ಶಿವಾನಂದ ಪಾಟೀಲರ ಹೇಳಿಕೆಯನ್ನು ಖಂಡಿಸಿದರು. ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಅವರ ಹೇಳಿಕೆ ಖಂಡನಾರ್ಹ ಎಂದರು.
ಮತ್ತೆ ಅವರು ರೈತರನ್ನು ಅವಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.ಅನ್ನ ಕೊಡುವ ರೈತರ ಬಗ್ಗೆ ಸಚಿವರ, ಸರಕಾರದ ಧೋರಣೆ ಆಕ್ಷೇಪಾರ್ಹ ಎಂದು ತಿಳಿಸಿದರು.
ದೆಹಲಿ ಪ್ರವಾಸದ ವೇಳೆ ಜಮೀರ್ ಅಹ್ಮದ್ ಅವರ ವರ್ತನೆಯನ್ನೂ ಖಂಡಿಸಿದರು.ಬರಗಾಲ ಸಂಬಂಧ ರೈತರಿಗೆ ಸಮರ್ಪಕ ಪರಿಹಾರ ನೀಡದ ಸರಕಾರ ಇದು ಎಂದು ನುಡಿದರು.
ರೈತರಿಗೆ ಪದೇಪದೇ ಅವಮಾನ ಮಾಡುವ ಸರ್ಕಾರ, ಸಚಿವರ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು. ಶಿವಾನಂದ ಪಾಟೀಲ್, ಜಮೀರ್ ಅಹ್ಮದ್ ಸೇರಿ ಸಚಿವರ ನಡವಳಿಕೆ ನಾವೆಲ್ಲ ತಲೆತಗ್ಗಿಸುವಂತಿದೆ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.