ಬಿಸಿಲತಾಪ ಏರುತ್ತಿದೆ ದೇಹ ತಂಪಾಗಿರಲು ಇಲ್ಲಿದೆ ಪರಿಹಾರ
ಬೆಳಗ್ಗೆ ಗಂಟೆ 10 ರಿಂದ ಮಧ್ಯಾಹ್ನದ 2ಗಂಟೆಯ ವರೆಗೆ ಸೂರ್ಯನ ಕಿರಣಗಳು ನೇರವಾಗಿ ಭೂಮಿಯನ್ನು ಸ್ಪರ್ಶಿಸುತ್ತವೆ. ಇದು ನಮ್ಮಲ್ಲಿ ಪಿತ್ತವನ್ನು ಹೆಚ್ಚಿಸುತ್ತದೆ.
ಈ ಸಮಯದಲ್ಲಿ ಆದಷ್ಟು ಒಳಾಂಗಣ ಕೆಲಸ ಕಾರ್ಯಗಳಲ್ಲಿ ತೊಡಗುವುದು ಉತ್ತಮ. ಪಿತ್ತ ಪ್ರಕೃತಿಯು ಹೆಚ್ಚಾದಂತೆ ಮಾನಸಿಕ ಉದ್ವೇಗ, ಕ್ರೋಧ, ಸಿಟ್ಟು, ಒತ್ತಡವೂ ಸಹಜವಾಗಿ ಅಧಿಕಗೊಳ್ಳುತ್ತದೆ. ಹಾಗಾಗಿ ಬೆಳಗ್ಗಿನ ವೇಳೆ ವ್ಯಾಯಾಮ ಮಾಡುವ ಅಭ್ಯಾಸ ಇರುವವರು ಬೇಗನೆ ಎದ್ದು ಧ್ಯಾನ, ಪ್ರಾಣಾಯಾಮ ಹಾಗೂ ಇತರ ವ್ಯಾಯಾಮಗಳನ್ನು ಮಾಡಬೇಕು. ಬಿರು ಬೇಸಗೆಯ ಸಂದರ್ಭದಲ್ಲಿ ಸಾಧ್ಯವಾದಷ್ಟು ಫ್ರಿಡ್ಜ್ ನಲ್ಲಿಟ್ಟು ಶೀತಲೀಕರಿಸಿದ ಆಹಾರ, ಸೋಡಾ, ಜ್ಯೂಸ್ಗಳನ್ನು ತ್ಯಜಿಸಬೇಕು. ದೇಹದ ಉಷ್ಣಾಂಶ ವನ್ನು ಕಡಿಮೆ ಮಾಡಲು ನಿಂಬೆ ರಸದ ಪಾನಕ, ಕಬ್ಬಿನ ಹಾಲು, ಎಳನೀರು, ಕೋಕಂನ ಪಾನಕ, ಆಮ್ಲ, ಕಲ್ಲಂಗಡಿ ಹಣ್ಣಿನ ರಸ ಉತ್ತಮ.
ಒಂದು ಚಮಚ ಕೊತ್ತಂಬರಿ ಕಾಳುಗಳನ್ನು ನೀರಿನಲ್ಲಿ ಹಿಂದಿನ ರಾತ್ರಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯು ವುದರಿಂದ ದೇಹದಲ್ಲಿ ಉಷ್ಣತೆ ಕಡಿಮೆಯಾಗುತ್ತದೆ. ಗುಲಾಬಿ ದಳಗಳ ರೋಸ್ ವಾಟ ರನ್ನು ಲಿಂಬೆ ಪಾನಕದಲ್ಲಿ ಬೆರೆಸಿ ಕುಡಿದರೆ ದೇಹ ತಂಪಾಗುತ್ತದೆ.ಹಾಗೆಯೇ ಮಣ್ಣು/ತಾಮ್ರ/ ಹಿತ್ತಾಳೆಯ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರು ಕುಡಿಯಬೇಕು. ಇದು ಪಿತ್ತ ದೋಷವನ್ನು ನಿವಾರಿಸಲು ಸಹಕಾರಿ. ಬೇಸಿಗೆಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಹಣ್ಣು ಕಲ್ಲಂಗಡಿ. ಇದು ಅನೆಕ ಪೋಷಕಾಂಶವನ್ನು ಹೊಂದಿದೆ. ಇದರಲ್ಲಿ ಶೇ 90ರಷ್ಟು ನೀರಿನಾಂಶ ಇರುತ್ತದೆ. ಹೃದಯದ ಆರೋಗ್ಯ ಕಾಪಾಡಲು, ತ್ವಚೆಯಲ್ಲಿ ಉಂಟಾಗುವ ಅವಧಿಪೂರ್ವ ಸುಕ್ಕುಗಳಿಂದ ತಪ್ಪಿಸಿಲು ಇದು ಸಹಾಯ ಮಾಡುತ್ತದೆ.
ಇದರಲ್ಲಿನ ಅಮಿನೋ ಆಮ್ಲವೂ ರೋಗ ನಿರೋಧಕಕ್ಕೆಸಹಾಯ ಮಾಡುತ್ತದೆ. ಮನೆಯಲ್ಲಿ ತಯಾರಿಸುವ ಆಹಾರದಲ್ಲಿಯೂ ಜೀರಿಗೆ, ಹಿಂಗನ್ನು ಮಜ್ಜಿಗೆಗೆ ಹಾಕಿ ಕುಡಿದರೂ ದೇಹ ತಂಪಾಗುವುದರ ಜತೆಗೆ ಅಜೀರ್ಣದಂತಹ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಹುಳಿ, ಖಾರ, ಉಪ್ಪಿನ ಅಂಶ ಆದಷ್ಟು ಕಡಿಮೆ ಸೇವಿಸಬೇಕು. ಹಣ್ಣು ತರಕಾರಿ ಸೊಪ್ಪನ್ನು ಆಹಾರದಲ್ಲಿ ಹೆಚ್ಚು ಉಪಯೋಗಿಸಬೇಕು, ಮುಳ್ಳುಸೌತೆಯು ಹೆಚ್ಚಿನ ನೀರಿನಂಶ ಹೊಂದಿದ್ದು ಬೇಸಗೆಗೆ ಉತ್ತಮ. ಹಸು ವಿನ ತುಪ್ಪ ಪಿತ್ತ ದೋಷವನ್ನು ಕಡಿಮೆ ಮಾಡಲು, ದೇಹದ ಒಳಗೆ ಹಾಗೂ ಚರ್ಮದ ತೇವಾಂಶ ವನ್ನು ಹಿಡಿದಿಟ್ಟುಕೊಳ್ಳಲು ಸಹಾಯಕ ವಾಗಿದೆ. ಇವೆಲ್ಲದರ ಹಿತಮಿತ ಸೇವನೆಯಿಂದ ಆರೋಗ್ಯ ರಕ್ಷಣೆ ಸಾಧ್ಯ. ಕಿತ್ತಳೆಯು ದೇಹವನ್ನು ಹೈಡ್ರೆಟ್ ಮತ್ತು ಚೈತನ್ಯ ನೀಡುವ ಹಣ್ಣು ಇದಾಗಿದೆ, . ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಹೃದಯದ ಕಾರ್ಯಾಚರಣೆ ವೃದ್ಧಿಸಲು, ತ್ವಚೆ ಆರೋಗ್ಯ ಸುಧಾರಣೆ ಮತ್ತು ವಿಟಮಿನ್ ಸಿ ಸೇರಿದಂತೆ ಅನೇಕ ಪ್ರಯೋಜನಗಳನ್ನು ಇದು ಹೊಂದಿದೆ.ಮಸ್ಕ್ಲನ್ (ಕರಬೂಜ ಹಣ್ಣು)ಈ ಹಣ್ಣು ದೇಹಕ್ಕೆ ಹೊರೆಯಾಗುವ ಯಾವುದೇ ಕ್ಯಾಲೋರಿಯನ್ನು ನೀಡದೇ ದೇಹದಲ್ಲಿ ನೀರಿನಾಂಶ ಕಾಪಾಡುವ ಜೊತೆಗೆ ಆರೋಗ್ಯಯುತವಾಗಿ ಇಡುವಲ್ಲಿ ಇದು ಸಹಾಯ ಮಾಡುತ್ತದೆ.
ಇದರಲ್ಲೂ ಕೂಡ ಶೇ 90ರಷ್ಟು ನೀರಿನಾಂಶವಿದೆ. ಪಿತ್ತ ಹೆಚ್ಚಾದಾಗ ಬೇವಿನ ಸೊಪ್ಪು ರಾಮಬಾಣದಂತೆ ಕೆಲಸ ಮಾಡುತ್ತದೆ. ಬಿಸಿಲಿನ ತಾಪದಿಂದ ದೇಹದಲ್ಲಿ ಬೆವರಿನ ಗುಳ್ಳೆಗಳು ಬಿದ್ದಲ್ಲಿ ಬೇವಿನ ರಸ ಅಥವಾ ಆಯುರ್ವೇದದ ಬೇವಿನ ಮಾತ್ರೆಗಳನ್ನು ಸೇವಿಸ ಬಹುದು ಇಲ್ಲವೇ ಬೇವಿನ ಎಣ್ಣೆಯನ್ನೂ ಉಪಯೋಗಿಸಬಹುದು.ಮುಖದ ಮೊಡವೆ ನಿವಾರಣೆಗೆ ಮುಲ್ತಾನಿ ಮಿಟ್ಟಿಯನ್ನು ರೋಸ್ ವಾಟರ್ ಜತೆಗೆ ಹಚ್ಚಿದರೆ ತ್ವಚೆಯ ಉಷ್ಣತೆ ಕಡಿಮೆಯಾಗಿ, ಕಾಂತಿ ಹೆಚ್ಚುವುದು. ಹಾಗೆಯೇ ಬೇಸಗೆ ಕಾಲದಲ್ಲಿ ಜಂಕ್ ಪುಡ್, ಹೊರಗಿನ ಕುರುಕು ತಿಂಡಿಗಳನ್ನು ತ್ಯಜಿಸಿ, ದೇಹದ ಸರಿಯಾದ ಪ್ರಮಾಣದಲ್ಲಿ ನೀರು ಅಥವಾ ನೀರಿನಂಶ ಹೆಚ್ಚಿರುವ ಹಣ್ಣು ತರಕಾರಿ ಉಪಯೋಗಿಸಿ ಹಾಗೂ ಸರಿಯಾದ ಸಮಯಕ್ಕೆ ನಿದ್ದೆ, ವ್ಯಾಯಾಮ ಮಾಡಿ ಮನಸ್ಸನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಸಾಧ್ಯ. ಬೇಸಗೆಯಲ್ಲಿ ನಿದ್ದೆಯೂ ಬಹುಮುಖ್ಯ ಪಾತ್ರ ವಹಿಸುತ್ತದೆ. ಬೇಸಗೆ ಕಾಲದಲ್ಲಿ ಸರಿಯಾಗಿ ನಿದ್ದೆ ಮಾಡಿ ಮನಸ್ಸನ್ನು ಪ್ರಸನ್ನವಾಗಿ ಇಡುವುದು ತುಂಬಾ ಮುಖ್ಯ. ಮನೆಯ ಒಳಾಂಗಣದಲ್ಲಿ ನೀರಿನ ಕುಂಡ ಗಳನ್ನು ಇರಿಸಿದಲ್ಲಿ ಅದು ವಾತಾವರಣ ವನ್ನು ತಂಪಾಗಿಸಲು ಸಹಕರಿಸುತ್ತದೆ.