For the best experience, open
https://m.bcsuddi.com
on your mobile browser.
Advertisement

ಪೊಲೀಸ್ ವಾಹನದಲ್ಲಿ ಗಣಪತಿ ಮೂರ್ತಿಯನ್ನ ಕೊಂಡೊಯ್ದ ಕ್ರಮಕ್ಕೆ ವಿಜಯೇಂದ್ರ ಕಿಡಿ..!

01:43 PM Sep 14, 2024 IST | BC Suddi
ಪೊಲೀಸ್ ವಾಹನದಲ್ಲಿ ಗಣಪತಿ ಮೂರ್ತಿಯನ್ನ ಕೊಂಡೊಯ್ದ ಕ್ರಮಕ್ಕೆ ವಿಜಯೇಂದ್ರ ಕಿಡಿ
Advertisement

ಬೆಂಗಳೂರು: ನಿನ್ನೆ ಟೌನ್ ಹಾಲ್‌ನಲ್ಲಿ ನಾಗಮಂಗಲ ಘಟನೆ ಸಂಬಂಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಅಲ್ಲಿಗೆ ತಂದಿದ್ದ ಗಣೇಶ ಮೂರ್ತಿಯನ್ನು ಪ್ರತಿಭಟನಾಕಾರರ ಜೊತೆ ಪೊಲೀಸ್ ವಾಹನದಲ್ಲಿ ಕೊಂಡೊಯ್ದ ಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿ ಕಾರಿದ್ದಾರೆ. ಇದು ಹಿಂದೂ ಸಮಾಜದ ಧಾರ್ಮಿಕ ಭಾವನೆಯನ್ನು ಕೆರಳಿಸುವ ಕ್ರಮವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ತಮ್ಮ X ಖಾತೆಯಲ್ಲಿ ಇದರ ಬಗ್ಗೆ ಟೀಕಿಸಿರುವ ವಿಜಯೇಂದ್ರ, ಗಣೇಶೋತ್ಸವ ಹಿಂದೂಗಳ ಧಾರ್ಮಿಕ ಶ್ರದ್ಧೆ ಹಾಗೂ ಸಾಂಸ್ಕೃತಿಕ ಸಂಗಮದ ದ್ಯೋತಕ. ಈ ಉತ್ಸವದ ಆಚರಣೆಗೆ ಎಲ್ಲೆ, ಕಟ್ಟುಪಾಡುಗಳನ್ನು ಮೀರಿ ಅಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಸಂಭ್ರಮಿಸುವ ಉತ್ಸವದ ಹಬ್ಬ. ಹಿಂದೂಗಳ ಧಾರ್ಮಿಕ ಆಚಾರ-ವಿಚಾರಗಳಲ್ಲಿ ಮೊದಲ ಪೂಜೆ ವಿಘ್ನ ನಿವಾರಿಸುವ ವಿನಾಯಕನಿಗೆ ಸಲ್ಲಿಸಲಾಗುತ್ತದೆ. ಈ ಕಾರಣದಿಂದಾಗಿಯೂ ಗಣೇಶನಿಗೆ ಎಲ್ಲಿಲ್ಲದ ಮಹತ್ವ ಎಂದು ಕಿಡಿಕಾರಿದ್ದಾರೆ. ಜನರ ಭಾವೊದ್ವೇಗಗಳು ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಬಾರದು ಎಂಬುದನ್ನು ಒಪ್ಪಬಹುದಾದರೂ ಅದರ ಹೆಸರಿನಲ್ಲಿ ಅನಗತ್ಯ ಕಿರಿಕಿರಿ ಉಂಟು ಮಾಡುವ ಮಾರ್ಗಸೂಚಿಗಳನ್ನು ಅಳವಡಿಸಿ ಉತ್ಸವ ಆಚರಣೆಯ ಸಡಗರದ ಸ್ವಾತಂತ್ರ್ಯಕ್ಕೆ ತೊಂದರೆ ನೀಡುವುದನ್ನು ಒಪ್ಪಲಾಗದು ಎಂದು ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ಧಪಡಿಸುವ ಮಾರ್ಗಸೂಚಿಗಳು ಉದ್ದೇಶಪೂರ್ವಕ ಎಂಬ ಭಾವನೆ ಹಿಂದೂ ಸಮಾಜದಲ್ಲಿ ಬಲವಾಗಿ ಬೇರೂರಿದೆ ಇದಕ್ಕೆ ನಾಗಮಂಗಲದಂತಹ ಘಟನೆ ಸಾಕ್ಷಿಯಾಗಿದೆ, ದುರ್ಘಟನೆ ಉದ್ಭವಿಸುವುದಕ್ಕೆ ಆಸ್ಪದ ನೀಡುವ ನಿಟ್ಟಿನಲ್ಲಿ ಉತ್ಸವ ವಿರೋಧಿ ದುಷ್ಟ ಗುಂಪುಗಳು ಗಣೇಶ ಮೆರವಣಿಗೆ ಸಂದರ್ಭದಲ್ಲಿ ದಾಂಧಲೆ ನಡೆಸಿ ಅಟ್ಟಹಾಸ ಮೆರೆಯುವ ಪರಿಸ್ಥಿತಿಯ ಸೃಷ್ಟಿಗೆ ಕಾನೂನು ಸುವ್ಯವಸ್ಥೆಯ ನಿಷ್ಕ್ರೀಯತೆ ಅವಕಾಶ ಮಾಡಿಕೊಡುತ್ತಿದೆ ಎಂದಿದ್ದಾರೆ. ಈ ಸಂಬಂಧವಾಗಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯ ಸದಸ್ಯರು ಟೌನ್ ಹಾಲ್ ಬಳಿ ಗಣೇಶ ಮೂರ್ತಿಯೊಂದಿಗೆ ಶಾಂತಿಯುತ ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಪ್ರತಿಭಟನಾನಿರತರೊಂದಿಗೆ 'ಗಣಪತಿ ಮೂರ್ತಿಯನ್ನೂ ಪೊಲೀಸ್ ವಾಹನದಲ್ಲಿ ಬಂಧಿಸಿಟ್ಟಿದ್ದು' ಹಿಂದೂ ಸಮಾಜದ ಧಾರ್ಮಿಕ ಭಾವನೆಯನ್ನು ಕೆರಳಿಸುವ ಕ್ರಮವಾಗಿದೆ ಎಂದು ಹೇಳಿದ್ದಾರೆ. ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಿ ಗಣೇಶ ಮೂರ್ತಿಯ ಪಾವಿತ್ರ್ಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಕಾಳಜಿವಹಿಸಬಹುದಾಗಿದ್ದ ಪೊಲೀಸರು ಅತ್ಯಂತ ಉಡಾಫೆಯಾಗಿ ವರ್ತಿಸಿರುವ ರೀತಿ ಸರ್ವಥಾ ಖಂಡನೀಯ, ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜದ ಬಗ್ಗೆ ತೋರುವ ತಾತ್ಸಾರ ದೋರಣೆಯನ್ನು ಈ ಘಟನೆ ಪ್ರತಿಬಿಂಬಿಸಿದೆ, ಈ ಕೂಡಲೇ ಸರ್ಕಾರ ಹಿಂದೂ ಸಮಾಜದ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement
Author Image

Advertisement