For the best experience, open
https://m.bcsuddi.com
on your mobile browser.
Advertisement

ನಾಗರ ಪಂಚಮಿಯ ಹಬ್ಬಕ್ಕೆ ವಿಶೇಷವಾಗಿ ಈ ತಿನಿಸು: "ಅರಿಶಿಣ ಎಲೆ ಕಡುಬು" ಮಾಡುವ ವಿಧಾನ

08:59 AM Aug 09, 2024 IST | BC Suddi
ನಾಗರ ಪಂಚಮಿಯ ಹಬ್ಬಕ್ಕೆ ವಿಶೇಷವಾಗಿ ಈ ತಿನಿಸು   ಅರಿಶಿಣ ಎಲೆ ಕಡುಬು  ಮಾಡುವ ವಿಧಾನ
Advertisement

ನಾಗರ ಪಂಚಮಿಯ ಹಬ್ಬಕ್ಕೆ ವಿಶೇಷವಾಗಿ ಈ ತಿನಿಸು ಮಾಡುತ್ತಾರೆ, ಕರಾವಳಿ ಭಾಗದಲ್ಲಿ ಅರಿಶಿಣದ ಎಲೆಯಿಂದ ಸಿಹಿ ಕಡುಬು ತಯಾರಿಸುತ್ತಾರೆ. ಅರಿಶಿಣ ಎಲೆ ಕಡುಬು ಅಥವಾ ಗಟ್ಟಿ ಎಂದು ಕರೆಯಲ್ಪಡುವ ಈ ತಿನಿಸನ್ನು ಒಮ್ಮೆ ಸವಿದರೆ ಸಾಕು, ಅದರ ರುಚಿ ಹಾಗೂ ಪರಿಮಳವನ್ನು ಮರೆಯಲು ಸಾಧ್ಯವೇ ಇಲ್ಲ.ಇದು ಬಾಯಿಗೆ ರುಚಿಕಾರಿ,ಆರೋಗ್ಯಕ್ಕೂ ಹಿತಕಾರಿ.

ಬೇಕಾಗುವ ಸಾಮಗ್ರಿಗಳು:
ಅರಿಶಿಣ ಎಲೆಗಳು
ಕುಚ್ಚಲಕ್ಕಿ
ತಿಂಡಿ ಅಕ್ಕಿ
ತೆಂಗಿನ ತುರಿ
ಬೆಲ್ಲದ ಪುಡಿ
ಉಪ್ಪು
ನೀರು

ಮಾಡುವ ವಿಧಾನ:
-ಅರಿಶಿಣ ಎಲೆ ಕಡುಬಿಗೆ ಕುಚ್ಚಲಕ್ಕಿ ಮತ್ತು ತಿಂಡಿ ಅಕ್ಕಿಯನ್ನು 2:1 ಅನುಪಾತದಲ್ಲಿ ಬಳಸಬೇಕು. ಕುಚ್ಚಲಕ್ಕಿ ಹಾಗೂ ತಿಂಡಿ ಅಕ್ಕಿಯನ್ನು 4 ಗಂಟೆ ನೆನೆಹಾಕಬೇಕು.
-ನೆನೆಹಾಕಿದ ಕುಚ್ಚಲಕ್ಕಿಯನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. ಈಗ ಅದೇ ಜಾರಿಗೆ ತೊಳೆದ ತಿಂಡಿ ಅಕ್ಕಿಯನ್ನು ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಂಡು ಕುಚ್ಚಲಕ್ಕಿ ಹಿಟ್ಟಿನೊಂದಿಗೆ ಮಿಕ್ಸ್ ಮಾಡಿ.ಹಿಟ್ಟು ಗಟ್ಟಿಯಾಗಿರಬೇಕು.ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.ಸಾಧ್ಯವಾದರೆ ನೀರು ಬಳಸದೆ ಅಕ್ಕಿಯನ್ನು ರುಬ್ಬಿಕೊಳ್ಳಿ.
-ತೆಂಗಿನ ಕಾಯಿ ತುರಿಗೆ ಬೆಲ್ಲ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಸ್ಟೌವ್ ಮೇಲಿಟ್ಟು 2-3 ನಿಮಿಷ ಬಿಸಿ ಮಾಡಿ. ಹೀಗೆ ಮಾಡುವಾಗ ಸೌಟ್‍ನಿಂದ ಮಗುಚುತ್ತಿರಿ. ಇಲ್ಲವಾದರೆ ಬೆಲ್ಲ ಮತ್ತು ಕಾಯಿ ಪಾತ್ರೆಯ ತಳಕ್ಕೆ ಹಿಡಿದು ಸೀದು ಹೋಗುವ ಸಾಧ್ಯತೆಯಿದೆ.
-ಈಗ ಅರಿಶಿಣ ಎಲೆಗಳನ್ನು ಚೆನ್ನಾಗಿ ತೊಳೆದು ಶುದ್ಧವಾದ ಬಟ್ಟೆಯಿಂದ ಒರೆಸಿ.
-ಕೈಯನ್ನು ಒದ್ದೆ ಮಾಡಿಕೊಂಡು ಅರಿಶಿಣ ಎಲೆ ಮೇಲೆ ಸವರಿ. ಬಳಿಕ ಸ್ವಲ್ಪ ಅಕ್ಕಿ ಹಿಟ್ಟವನ್ನು ಎಲೆಯ ಮಧ್ಯಭಾಗದಲ್ಲಿಟ್ಟು ಕೈಯಿಂದ ಎಲೆಯ ಎಲ್ಲ ಭಾಗಕ್ಕೂ ಹರಡಿ.ಆದಷ್ಟು ತೆಳುವಾಗಿರುವಂತೆ ಹಿಟ್ಟನ್ನು ಎಲೆಗೆ ಹಚ್ಚಿ. ಎಲೆಯ ಬದಿಗಳಿಗೆ ಹಿಟ್ಟು ತಾಗದಂತೆ ನೋಡಿಕೊಳ್ಳಿ.

Advertisement

-ಈಗ ಹಿಟ್ಟಿನ ಮೇಲೆ ಕಾಯಿ ಮತ್ತು ಬೆಲ್ಲದ ಮಿಶ್ರಣವನ್ನು ಹರಡಿ.ಎಲೆಯನ್ನು ಜಾಗ್ರತೆಯಿಂದ ಅರ್ಧಭಾಗಕ್ಕೆ ಬರುವಂತೆ ಅಡ್ಡಲಾಗಿ ಮಡಚಿ.ಎಲೆಯ ಬದಿಗಳನ್ನು ಕೈಗಳಿಂದ ನಿಧಾನವಾಗಿ ಒತ್ತಿ ಹಿಟ್ಟು ಹೊರಬಾರದಂತೆ ಪ್ಯಾಕ್ ಮಾಡಿ. ಎಲೆಗಳನ್ನು ಇಡ್ಲಿ ಪಾತ್ರೆಯಲ್ಲಿಟ್ಟು 15-20 ನಿಮಿಷ ಹಬೆಯಲ್ಲಿ ಬೇಯಿಸಿ.
-ಬೆಂದ ಬಳಿಕ ಇಡ್ಲಿ ಪಾತ್ರೆಯಿಂದ ಎಲೆಯನ್ನು ಹೊರತೆಗೆದು ಅದರ ಮೇಲಿನ ಎಲೆಯನ್ನು ತೆಗೆದು ಸರ್ವ್ ಮಾಡಿ. ಅರಿಶಿಣದ ಎಲೆಯಲ್ಲಿ ಬೇಯಿಸಿದ ಕಾರಣಕ್ಕೆ ಕಡುಬಿಗೂ ಅದರ ಪರಿಮಳ ಹರಡಿರುತ್ತದೆ. ತುಂಬಾ ಸುವಾಸನೆ ಭರಿತವಾದ ಈ ಕಡುಬಿಗೆ ಕಾಯಿ ಮತ್ತು ಬೆಲ್ಲದ ಹೂರಣ ಸೇರಿರುವುದರಿಂದ ತಿನ್ನಲು ರುಚಿಯಾಗಿರುತ್ತದೆ.ಈ ಕಡುಬು ಎರಡು ದಿನಗಳ ಕಾಲವಿಟ್ಟರೂ ಹಾಳಾಗದು.
-ಸಿಹಿ ಬೇಡ ಎನ್ನುವವರು ಕಾಯಿ ಹೂರಣವನ್ನು ಬಳಸದೆ ಹಾಗೆಯೇ ಬೇಯಿಸಬಹುದು. ಸಿಹಿ ಹಾಕದ ಕಡುಬನ್ನು ಚಟ್ನಿ ಅಥವಾ ಸಾಂಬಾರ್‍ನೊಂದಿಗೆ ಸವಿಯಬಹುದು.
-ಅರಿಶಿಣ ಎಲೆ ಸಿಗದಿದ್ದರೆ ಅದರ ಬದಲಿಗೆ ಬಾಳೆ ಎಲೆ ಬಳಸಿ ಕೂಡ ಈ ಕಡುಬು ಮಾಡಬಹುದು. ಆದರೆ, ಬಾಳೆಎಲೆಯಲ್ಲಿ ಮಾಡಿದ ಕಡುಬಿಗೆ ಅರಿಶಿಣ ಎಲೆಯ ಕಡುಬಿನಷ್ಟು ಸುವಾಸನೆ ಹಾಗೂ ರುಚಿಯಿರುವುದಿಲ್ಲ.
-ಕುಚ್ಚಲಕ್ಕಿ ಬೇಡ ಎನ್ನುವವರು ತಿಂಡಿ ಅಕ್ಕಿಯನ್ನು ಮಾತ್ರವೇ ಬಳಸಬಹುದು. ಆದರೆ, ಕುಚ್ಚಲಕ್ಕಿ ಬಳಸಿದ್ರೆ ರುಚಿ ಚೆನ್ನಾಗಿರುತ್ತದೆ.

Author Image

Advertisement