ಎಸ್.ಪಿ. ಕಚೇರಿ ಇರುವ ಸರ್ಕಾರಿ ಜಾಗವನ್ನೇ ಮಾರಾಟ ಮಾಡಲು ಯತ್ನಿಸಿದ ಮೂವರು ಅಂದರ್.!
ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಗ್ರಾಮಾಂತರ ಎಸ್.ಪಿ. ಕಚೇರಿ ಇರುವ ಸರ್ಕಾರಿ ಜಾಗವನ್ನೇ ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಬೆಂಗಳೂರು ಜಿಲ್ಲೆ ವಯರ್ಲೆಸ್ ಜಿಲ್ಲಾ ನಿಯಂತ್ರಣ ಕೊಠಡಿಯ ಇನ್ಸ್ಪೆಕ್ಟರ್ ಹಾಗೂ ಎಸ್ಟೇಟ್ ಆಫೀಸರ್ ಸಂತೋಷ್ ಗೌಡ ಅವರು ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರದ ಎಂ.ಡಿ. ಹನೀಫ್, ವಿಜಯನಗರದ ರಾಜಶೇಖರ, ಉಲ್ಲಾಳದ ಮಹಮದ್ ನದಿಮ್ ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಸಂಜಯ್ ನಗರದ ಮೋಹನ ಶೆಟ್ಟಿ, ಗಣಪತಿ, ಜಹೀರ್ ಎಂಬುವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.
ವಸಂತನಗರದ ಮಿಲ್ಲರ್ಸ್ ರಸ್ತೆಯ ಕೇಂದ್ರ ವಲಯ ಐಜಿಪಿ ಕಚೇರಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್.ಪಿ. ಕಚೇರಿ ಇರುವ ಆವರಣಕ್ಕೆ ಅಪರಿಚಿತರು ಅತಿಕ್ರಮ ಪ್ರವೇಶ ಮಾಡಿದ್ದು, ತಮ್ಮ ಮೊಬೈಲ್ ನಿಂದ ಕಚೇರಿಯ ಕಟ್ಟಡ ಹಾಗೂ ಆವರಣ ಚಿತ್ರೀಕರಿಸಿ ಫೋಟೋ ಸೆರೆ ಹಿಡಿಯಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಎಸ್ಟೇಟ್ ಆಫೀಸರ್ ಇನ್ಸ್ಪೆಕ್ಟರ್ ಸಂತೋಷ್ ಗೌಡ ಪ್ರಶ್ನಿಸಿದ್ದಾರೆ. ಆಗ ಅಪರಿಚಿತರು ನಮ್ಮನ್ನು ಕೇಳಲು ನೀನು ಯಾರು? ಈ ಸ್ವತ್ತಿನ ದಾಖಲೆಗಳು ನಮ್ಮ ಬಳಿ ಇದೆ. ಸ್ವತ್ತಿನ ಮಾಲೀಕ ಗಣಪತಿ, ಜಹೀರ್ ನಮಗೆ ಜಿಪಿಎ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆ ಪೋಲಿಸಲು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.